ಬುಧವಾರ, ಸೆಪ್ಟೆಂಬರ್ 30, 2020

ಆಪತ್ಕಾಲದಲ್ಲಿ ಸಿಕ್ಕ ಆಪ್ತಮಿತ್ರ ಆಜಪ್ಪ ಬಾಬು ಕಂಬಾರ 


ಶೆಟ್ಟಿಗೇರಿ ಸಿಂಹ ಆಜಪ್ಪ

ದಿ ಬಿಗಿನಿಂಗ್

ಯಾದಗಿರಿ ಜಿಲ್ಲೆಯ ಶೆಟ್ಟಿಗೇರಿ ಗ್ರಾಮದ ಸಿಡಿಲಮರಿ ಆಜಪ್ಪ ಬಾಬು ಕಂಬಾರ ಅಲಿಯಾಸ್ ಆಜಪ್ಪ ಅಲಿಯಾಸ್ ಗೊಬ್ಬ ಅಲಿಯಾಸ್ ಗೊಬ್ಬು….  ಅವನು ನಂಗೆ ಹಳೇ ಪರಿಚಯ. ಎಂ.ಫಿಲ್ ಓದುವಾಗ ಪರಿಚಯವಾಗಿದ್ದ. ಆಗ ತೀರಾ ಆತ್ಮೀಯನೇನೂ ಆಗಿರಲಿಲ್ಲ.  2014 ರಲ್ಲಿ ನಾನು ಪಿಎಚ್.ಡಿ ಗೆ ಆಯ್ಕೆಯಾಗಿ ಸಿ.ಯು.ಕೆ ಗೆ ಬಂದಾಗ ಶುರುವಾಗಿದ್ದೇ ವಸತಿ ಸಮಸ್ಯೆ. ಯುನಿವರ್ಸಿಟಿ ಹಾಸ್ಟೆಲ್ ಫುಲ್ ಆಗಿತ್ತು. ಹೊರಗಡೆ ರೂಂ ಮಾಡಿ ಓದುವ ಅನಿವಾರ್ಯತೆ. ಅಪರಿಚಿತ ಊರು ಬೇರೆ. ಇಂತಹ ಪರಿಸ್ಥಿತಿಯಲ್ಲಿ ನೆರವಾದವನೇ ಆಜಪ್ಪ. ಈಗಾಗಲೇ ಅವನು ಸಿಯುಕೆಯಲ್ಲಿ ಪಿಎಚ್.ಡಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಹಳೇ ಪರಿಚಯದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ (ನನಗೆ ಹೊರಗೆ ರೂಂ ಸಿಗುವವರೆಗೆ) ತನ್ನ ಹಾಸ್ಟೆಲ್ ರೂಂ ನಲ್ಲಿರಲು ಅವಕಾಶ ಮಾಡಿಕೊಟ್ಟ. ಐದು ದಿನ ಅವನ ರೂಂ ನಲ್ಲಿದ್ದೆ. ಅಷ್ಟರಲ್ಲಿ ನಂಗೆ ಸಾಕಾಗಿಹೋಗಿತ್ತು. ಚಿಕ್ಕ ರೂಂ, ಜೊತೆಗೆ ಅವನ ರೂಂ ಮೇಟ್. ಅವರವರ ಬಟ್ಟೆ, ಪುಸ್ತಕ ಇನ್ನಿತರ ಲಗೇಜ್. ರೂಂ ತುಂಬಿಹೋಗಿತ್ತು. ನನ್ನ ಬಟ್ಟೆ ಬಿಚ್ಚಿ ಹಾಕಲು ಜಾಗವಿರಲಿಲ್ಲ. ಬಟ್ಟೆ ಬದಲಾಯಿಸಿ ನನ್ನ ಬ್ಯಾಗ್ ನಲ್ಲೇ ತುರುಕುತಿದ್ದೆ. ಮೊದಲಿನಿಂದಲೂ ಮಟ್ಟಸವನ್ನೇ ಬಯಸುತ್ತಿದ್ದ ನನಗೆ ರೂಂ ಕಿಷ್ಕಿಂದೆ ಅನಿಸತೊಡಗಿತು. ಐದೇ ದಿನಕ್ಕೆ ಗುಲಬರ್ಗ ಬೋರ್ ಹೊಡೆಸತೊಡಗಿತು. ಸಾಕು ಪಿಎಚ್.ಡಿ ಅನ್ನಿಸಿತು. ಚಿಕ್ಕ ಪುಟ್ಟ ಸಮಸ್ಯೆಗಳೇ ಬೆಟ್ಟದಂತ ಸಮಸ್ಯೆಗಳಾಗಿ ಕಾಣಿಸಿದವು. ಡಿಪಾರ್ಟ್ಮೆಂಟ್ ನಲ್ಲಿ ಅಡ್ಮಿಷನ್ ಗೆ ಕೊಟ್ಟಿದ್ದ ನನ್ನ ಒರಿಜಿನಲ್ ಡಾಕ್ಯುಮೆಂಟ್ಸ್ ಗಳನ್ನು ಏನೋ ಒಂದು ನೆಪ ಹೇಳಿ ವಾಪಾಸು ತಗೋಂಡೆ. ಐದನೇ ದಿನ ಸಂಜೆ (ಶುಕ್ರವಾರ) ಅವನು ರೂಂ ನಿಂದ ಹೊರಗಡೆ ಹೋಗಿದ್ದ. ಅವನಿಗೆ ಒಂದು ಮಾತು ಹೇಳದೇ ನನ್ನ ಬ್ಯಾಗ್ ಎತ್ತಿಕೊಂಡು ನನ್ನೂರಿಗೆ ಬಂದುಬಿಟ್ಟೆ. ಆಮೇಲೆ ಗುಲ್ಬರ್ಗ ಕಡೆ ತಲೆ ಹಾಕಿಯೂ ಮಲಗಲಿಲ್ಲ. ತುಂಬಾ ದಿನಗಳು ಕಳೆದವುಆಮೇಲೆ ಒಂದು ದಿನ ಗೊಬ್ಬು ಫೋನ್ ಮಾಡಿದ, ಸುಮಾರು ಒಂದು ತಾಸು ಮಾತಾಡಿದ, ತುಂಬಾ ಬೈದ. ಹೀಗೆ ಪಿಎಚ್.ಡಿ ಬಿಟ್ಟುಹೋದ್ರೆ ಹೇಗೆ? ಇಂತಹ ಯುನಿವರ್ಸಿಟಿಲಿ ಪಿಎಚ್.ಡಿ ಸೀಟ್ ಸಿಗೋದೇ ಕಷ್ಟ. ಅಂತದ್ರಲ್ಲಿ ಸಿಕ್ಕ ಸೀಟ್ ಬಿಟ್ಟು ಹೋಗಿದಿಯಲ್ಲ? ಸಮಸ್ಯೆ ಯಾರಿಗಿಲ್ಲ? ನಿನಗೇನೇ ಸಮಸ್ಯೆ ಇದ್ರೂ ನನಗೆ ಹೇಳು, ನಾನಿದೀನಿ ಬಾಅಂತ ಕರೆದಮತ್ತೆ ಮನಸ್ಸು ಗುಲಬರ್ಗದ ಕಡೆ ಜಗ್ಗತೊಡಗಿತು.

 

ಗುಲಬರ್ಗದ ಹಾದಿಯಲ್ಲಿ

 

ನಾನೇನೋ ಮತ್ತೆ ಯುನಿವರ್ಸಿಟಿ ಗೆ ಹೋಗಲು ತಯಾರಾಗಿದ್ದೆ. ಆದರೆ ನಮ್ಮ ವಿಭಾಗದಲ್ಲಿ ನನ್ನ ಹಾಜರಾತಿ ನಿಂತುಹೋಗಿ ತುಂಬಾ ದಿನಗಳೇ ಉರುಳಿದ್ದವು. ಇದರಿಂದಾಗಿ ನನ್ನ ಅಡ್ಮಿಷನ್ ಕ್ಯಾನ್ಸಲ್ ಆಗಿರುವ ಸಾಧ್ಯತೆಗಳು ಇದ್ದವು. ಇದನ್ನೆ ಗೊಬ್ಬುಗೆ ಹೇಳಿದೆ. ವಿಭಾಗದ ಗುರುಗಳಿಗೆ ಫೋನ್ ಮಾಡಿ ವಿನಂತಿಸಿಕೋ, ಅವ್ರು ತುಂಬಾ ಒಳ್ಳೆಯವರು ಅಂದ. ಗುರುಗಳು ತುಂಬಾ ಸ್ಟ್ರಿಕ್, ಅವ್ರಿಗೆ ಅಟೆಂಡೆನ್ಸ್ ತುಂಬಾ ಇಂಪಾರ್ಟೆಂಟ್ ಅನ್ನೊ ಮಾತುಗಳು ಮೊದಲ ಐದು ದಿನದಲ್ಲಿ ಕೇಳಿದ್ದೆ. ಜೊತೆಗೆ ಅವರ ಗಂಭೀರ ಮುಖಭಾವ ನನ್ನಲ್ಲಿ ಒಂದು ರೀತಿಯ ಅಳುಕು ಉಂಟು ಮಾಡಿತ್ತು. ಅಳುಕಿನಿಂದಲೇ ಅವರಿಗೆ ಫೋನಾಯಿಸಿದೆ... ನನ್ನ ಸಮಸ್ಯೆ ಹೇಳಿಕೊಂಡೆ, ಮತ್ತೇ ಬರ್ತೀನಿ ಅಂತ ವಿನಂತಿಸಿಕೊಂಡೆ. ಅವರು ಎಷ್ಟು ಒಳ್ಳೆಯ ಮನಸ್ಸಿನಿಂದ ಒಪ್ಪಿದರು ಅಂದ್ರೆ ನನ್ನ ಒಂದೇ ವಿನಂತಿಗೆ "ಬಾ.." ಅಂದರು. ( ಆಜಪ್ಪ ಮತ್ತು ವಿಭಾಗದ ಗುರುಗಳು ಇವರಿಬ್ಬರು ನನ್ನ ಡಾಕ್ಟರೇಟ್ ಪದವಿಗೆ ಕಾರಣ. ಇವರಿಬ್ಬರು ಇಲ್ಲದಿದ್ದರೆ ಸಿಯುಕೆಯಲ್ಲಿ ನನ್ನ ಪಿಎಚ್.ಡಿ ಕನಸಾಗಿಯೇ ಉಳಿಯುತಿತ್ತು. ) 

 

ಹಾಸ್ಟೆಲ್ ರೂಂ ನಲ್ಲಿ… 


ಪಿಎಚ್.ಡಿ ಎರಡನೇ ಇನ್ನಿಂಗ್ ಶುರುವಾಯಿತು. ಗೊಬ್ಬುವಿನ ರೂಂ ನಲ್ಲೇ ಮತ್ತೆ ವಾಸ್ತವ್ಯ ಹೂಡಿದೆ. ಅವನು ಎಷ್ಟೊಂದು  ಸಹೃದಯಿಯೆಂದರೆ ತಾನು ಮಲಗುವ ಮಂಚವನ್ನೇ ನನಗಾಗಿ ಬಿಟ್ಟುಕೊಟ್ಟು ತಾನು ಕೆಳಗೆ ಕೌದಿ ಹಾಸಿಕೊಂಡು ಮಲಗತೊಡಗಿದ. ಅದು ಸುಮಾರು ಆರು ತಿಂಗಳವರೆಗೆ! ಮಂಚದ ಒಂದು ಬದಿಗೆ ನನ್ನ ಪುಸ್ತಕ, ಬಟ್ಟೆಗಳನ್ನು ಇಡತೊಡಗಿದೆ. ಇಲ್ಲಿ ಅವನ ರೂಂ ಬಗ್ಗೆ ಹೇಳಬೇಕು. ಅದು 12x12 ಸೈಜಿನ ಚಿಕ್ಕ ರೂಂ. ಅಟ್ಯಾಚ್ಡ್ ಬಾತ್ ಆ್ಯಂಡ್ ಟಾಯ್ಲೆಟ್. Maximum ಇಬ್ಬರು ಇರಬಹುದಾದ ರೂಂ. ರೂಂ ಬಾಗಿಲೊಳಗೆ ಕಾಲಿಟ್ಟ ಕೂಡಲೇ ಎಡಕ್ಕೆ ಟೇಬಲ್, ಟೇಬಲ್ ಮೇಲೆ ಒಂದು ಎಚ್.ಪಿ ಲ್ಯಾಪ್ ಟಾಪ್ ಇಟ್ಕೊಂಡು ಗೊಬ್ಬುವಿನ ರೂಂ ಮೇಟ್ ರಘು ಸ್ಥಾಪಿತನಾಗಿದ್ದ. ರಘು ಆಜಾನುಬಾಹು, ಸ್ನೇಹಜೀವಿ. ಹಾಗೆ ಸರಿಯಾಗಿ ಮುಂದೆ ಎರಡು ಹೆಜ್ಜೆ ಇಟ್ಟರೆ ಅಲ್ಲಿ ಗೊಬ್ಬುವಿನ ಮಂಚ, ಮಂಚದ ಮೇಲೆ ಅಸ್ತವ್ಯಸ್ತವಾಗಿ ಸುರಿದಿದ್ದ ರಾಶಿ ಪುಸ್ತಕಗಳು, ಬಿಚ್ಚಿಟ್ಟ ಲುಂಗಿ, ಮುದುಡಿದ ಅಂಗಿ, ಮಂಚದ ಕೆಳಗೆ ಅವನ ಲ್ಯಾಪ್ ಟಾಪ್, ಸುತ್ತಿ ಬಿಸಾಡಿದ ಕೌದಿ, ಕಮಟು ದಿಂಬು, ಟೇಬಲ್ ಮೇಲೆ ರಾಶಿಯಾಗಿ ಸುರಿದ ಬಟ್ಟೆಗಳು. ಚೇರ್ ಮೇಲೆ ಸ್ನಾನ ಮಾಡಿ ಹಿಂಡಿಹಾಕಿದ ಹಸಿ ಚೆಡ್ಡಿ, ತುಂಬು ತೋಳಿನ ಬಿಳಿ ಬನಿಯನ್... ಇದಿಷ್ಟು ಚಿತ್ರಣ ಕಾಣುತ್ತಿತ್ತು. ಆಮೇಲೆ ಮಂಚ ಖಾಲಿ ಮಾಡಿ ನನಗೆ ಬಿಟ್ಟುಕೊಟ್ಟ. (ಆರು ತಿಂಗಳ ನಂತರ ಅದೇ ಗುರುಗಳ ಕೃಪೆಯಿಂದಾಗಿ ನನಗೆ ಅದೇ ಹಾಸ್ಟೆಲ್ ನಲ್ಲಿ ರೂಂ ಕೂಡಾ ಸಿಕ್ಕಿತು.)

 

ಭಾಷೆಗೆ ಹೊಸ ಭಾಷ್ಯ ಬರೆದ ಭಯಂಕರ ಭಾಷಾವಿಜ್ಞಾನಿ

 

ಸ್ನಾನ ಮಾಡಿದರೂ ಮಾಡದಂತೆ ಕಾಣುತ್ತಿದ್ದ ಆಜಪ್ಪ ತನ್ನನ್ನು ತಾನು ಗೊಬ್ಬ ಎಂದು ಹೆಮ್ಮೆಯಿಂದ, ಖುಷಿಯಿಂದ ಕರೆದುಕೊಳ್ಳುತ್ತಿದ್ದ. Basically ಅವನು ಯಾವಾಗಲೂ ಸ್ವಚ್ಛವಿರುತ್ತಿರಲಿಲ್ಲ. ಆದ್ದರಿಂದಲೇ ಅವನ ಅಜ್ಜಿ ಅವನಿಗೆ ಗೊಬ್ಬ (ಗಬ್ಬು, ಗಬ್ಬು ನಾತ ಅಂತೀವಲ್ಲ ಹಾಗೆ!) ಎಂದು ಕರೆಯುತ್ತಿದ್ದಳಂತೆ. ಅದನ್ನೆ ತನ್ನ ಅಸ್ಮಿತೆಯ ಕುರುಹಾಗಿ ಹೆಸರಿಟ್ಟುಕೊಂಡಿದ್ದ. ಅಷ್ಟೇ ಯಾಕೆ, ಅವನ Mail ID ಕೂಡಾ gobbavanu@gmail.com . ಗೊಬ್ಬು ದಿನದಿಂದ ದಿನಕ್ಕೆ ಇಂಚಿಂಚಾಗಿ ಅರ್ಥವಾಗತೊಡಗಿದ. ಅವನಿಗೆ ಹಿಂಜರಿಕೆ, ಸಂಕೋಚಗಳೇ ಇರುತ್ತಿರಲಿಲ್ಲ. ಕರ್ಣ ಕಠೋರವಾದ, ಭಯಂಕರ ಪದಗಳನ್ನು ಸಹಜವಾಗಿ, ಲೀಲಾಜಾಲವಾಗಿ ಬಳಸುತ್ತಿದ್ದ. ಅವನು ಭಾಷಾಶಾಸ್ತ್ರವನ್ನು ಆಳವಾಗಿ ಅಧ್ಯಯನ ಮಾಡಿದ್ದು (ಅವನ ಎಂ.ಫಿಲ್ ಮತ್ತು ಪಿಎಚ್.ಡಿ ಕ್ಷೇತ್ರ ಭಾಷಾವಿಜ್ಞಾನ) ಇದಕ್ಕೆ ಕಾರಣವಾಗಿರಬಹುದೇನೋ? ಗೊತ್ತಿಲ್ಲ! ನನಗೆ ಮೊದಮೊದಲು ಇದರಿಂದ ತುಂಬಾ ಕಿರಿಕಿರಿಯಾದದ್ದು ಸತ್ಯ. ಅವನ ಅನಾಗರಿಕ ವರ್ತನೆಗೆ ಸಾಕಷ್ಟು ಸಲ ಬೈದಿದ್ದೆ. ಅದಕ್ಕೆಲ್ಲಾ ಅವನು 'ಹ್ಹಿಹ್ಹಿಹ್ಹೀ...' ಅಂತ ನಗುತ್ತಲೇ ನನ್ನನ್ನು ಸುಮ್ಮನಾಗಿಸುತ್ತಿದ್ದ. ಅವನು ಒಂದು ರೀತಿಯಲ್ಲಿ ಉಪೇಂದ್ರ ಸಿನೆಮಾದ ಉಪೇಂದ್ರನ ಥರಾ. ಮನಸ್ಸು ಮತ್ತು ನಾಲಗೆ ನಡುವಿನ ಫಿಲ್ಟರ್ ಕಿತ್ತುಹಾಕಿದ್ದ. ಮನಸ್ಸಿನೊಳಗೇನು ಹುಟ್ಟುತ್ತೋ ಅದನ್ನು ಸರಾಗವಾಗಿ ನಾಲಿಗೆಯಿಂದ ಹೊರಹಾಕುತಿದ್ದ. ಇದು ಕೆಲವರಿಗೆ ಕಿರಿಕಿರಿಯನ್ನೂ, ಇನ್ನು ಕೆಲವರಿಗೆ ಮನೋರಂಜನೆಯನ್ನು ನೀಡುತಿತ್ತು. ಹಾಸ್ಟೆಲ್ Free Wi-Fi facility ಯನ್ನು ಪರಿಪೂರ್ಣವಾಗಿ ಬಳಸಿಕೊಂಡವನು ಗೊಬ್ಬು ಮಾತ್ರ ಅನ್ಸುತ್ತೆ. ಸಾವಿರ ಕಲೆಗಳಿದ್ದ ಕೌದಿಯನ್ನು ಬಿಗಿಯಾಗಿ ಹೊದ್ದುಕೊಂಡು ಲ್ಯಾಪ್ಟಾಪ್ ಬಿಚ್ಚಿ ಕುಳಿತನೆಂದರೆ ಅವನಿಗೆ ಸಮಯದ ಮಿತಿಯಿರುತ್ತಿರಲಿಲ್ಲ. ಹಗಲಿರುಳು ವಿವಿಧ ವೆಬ್ ಸೈಟ್ ಗಳನ್ನು ತಡಕಾಡುತ್ತಾ, ಮಾಹಿತಿ ಹೆಕ್ಕುತ್ತಾಸಂಶೋಧನೆಯಲ್ಲಿ ತೊಡಗುತ್ತಿದ್ದ. ಹೀಗಾಗಿ ಅವಧಿಗಿಂತ ಒಂದು ವರ್ಷ ಮುಂಚೆಯೇ ಪಿಎಚ್.ಡಿ ಮುಗಿಸಿಬಿಟ್ಟ!

 

 ಉನ್ಮತ್ತ ಪ್ರೇಮ ಸಂದೇಶಗಳ ಜಡಿಮಳೆಯಲ್ಲಿ ನಗುತ್ತಾ ನಿಂತವನು

 

ಹ್ಹಿಹ್ಹಿಹ್ಹೀ… ನಗೆಯ 💗ಗೊಬ್ಬು


ಅವನು ಹಾಸ್ಟೆಲ್ ನಲ್ಲಿ ಇರುವವರೆಗೆ ನೋಕಿಯಾ 1100 ಥರದ ಕಡುನೀಲಿ ಬಣ್ಣದ ಬೇಸಿಕ್ ಮೊಬೈಲ್ ಬಳಸುತ್ತಿದ್ದ. ರಾತ್ರಿ ವೇಳೆ ಅದರಲ್ಲಿ  ಯಾರೊಂದಿಗೋ  SMS ಚಾಟ್ ಮಾಡುತ್ತಾಅದರಲ್ಲಿಯ ಮೆಸೇಜ್ (SMS) ಗಳನ್ನು ಪದೇ ಪದೇ  ಓದುತ್ತಾ 'ಹ್ಹೀಹ್ಹೀಹ್ಹೀ...' ನಗುತ್ತಿದ್ದ. ರಾತ್ರಿಯ ನೀರವತೆಯಲ್ಲಿ ಅವನ ನಗು ಅಲೆಯಾಗಿ ತೇಲುತಿತ್ತು. ಮೊದಲೆಲ್ಲಾ ಅದನ್ನು ನಿರ್ಲಕ್ಷಿಸಿದ್ದ ನಾನು ನಂತರ ಅದು ಪುನರಾವರ್ತನೆಯಾದಂತೆಲ್ಲಾ ಕುತೂಹಲ ಕೆರಳತೊಡಗಿತು. 'ಏನಿದು ಗೊಬ್ಬವನೇ...?' ಅಂತ ಕೇಳುವುದಕ್ಕೂ ಮುಂಚೆ ತಾನೇ ಎಲ್ಲಾ ಮೆಸೇಜ್ ತೋರಿಸಿದ. ಓದಿ ನಿಬ್ಬೆರಗಾದೆಅವನಿಗೊಬ್ಬ ಪ್ರೇಯಸಿ ಸಿಕ್ಕುಬಿಟ್ಟಿದ್ದಳು!! ಅದೂ ಅವಳೇ ಇವನಿಗೆ ಪ್ರಪೋಸ್ ಮಾಡಿ, ಇವನ ಪ್ರೀತಿಗಾಗಿ ದುಂಬಾಲು ಬಿದ್ದಿದ್ದಳು!!! ಅದನ್ನು ಒಪ್ಪಿಕೊಳ್ಳಲು ಆಗದೇ, ತಿರಸ್ಕರಿಸಲೂ ಆಗದೇ ತೊಳಲಾಟದಲ್ಲಿ ಸಿಲುಕಿದ್ದ. ಪ್ರೇಮದ ಬಗ್ಗೆ, ಅದರ ಅಗಾಧತೆಯ ಬಗ್ಗೆ ಒಂಚೂರು ಅನುಭವವಿರದ ಜಾಲಿಬೊಡ್ಡೆಯಂತಹ ಗೊಬ್ಬು ಅವಳ ಭಾವನೆಗಳ ಭೋರ್ಗೆರೆತದ ಪ್ರೇಮಭರಿತ ಸಂದೇಶಗಳನ್ನು ಓದಿ ಅದಕ್ಕೆ ಸ್ಪಂದಿಸುವ ಅರಿವಿಲ್ಲದವನಾಗಿದ್ದರಿಂದ  ಅವೆಲ್ಲಾ ಅವನಲ್ಲಿ ಕಿಸಕಿಸನೇ ನಗು ಉಕ್ಕಿಸುತ್ತಿತ್ತು. ಪ್ರೇಮದ ಉತ್ತುಂಗವೆಂಬಂತೆ  "ನಿನ್ನ ಕಚ್ಚಿಬಿಡ್ತೇನೆ" ಅಂತ ಅವಳು ಇವನಿಗೆ ಸಂದೇಶ ಕಳಿಸಿದ್ದಳು. ಪುಣ್ಯಾತ್ಮ ಅದನ್ನು ಓದಿ ನಗು ನಿತ್ತರಿಸಿಕೊಳ್ಳಲಾಗದೇ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದ, ಬಹುಹೊತ್ತಿನವರೆಗೆ ನಗುತ್ತಿದ್ದ. ನಂತರವೂ ಬಹುದಿನಗಳವರೆಗೆ ಮೆಸೇಜ್ ನ್ನು ಪದೇಪದೇ ಓದಿ ನಗುತ್ತಿದ್ದ. ನನಗೆ ನೆನಪಿದ್ದಂತೆ ಅವನ ಪಿಎಚ್.ಡಿ ಮುಗಿಯುವ ಕೊನೆಯ ದಿನದವರೆಗೂ ಅವನ ಮೊಬೈಲ್ ನಲ್ಲಿ ಮೆಸೇಜ್ ಇತ್ತು. ಬರಗಾಲದಲ್ಲಿ ಬಿರುಕುಬಿಟ್ಟ ಒಣಭೂಮಿಯಂತಹ ಇವನ ಒಣಗಿದ ಹೃದಯದಲ್ಲಿ ಕೊನೆಗೂ ಪ್ರೇಮದ ಸಸಿ ಚಿಗುರಿಸಲು ಹುಡುಗಿಯಿಂದ ಸಾಧ್ಯವಾಗಲಿಲ್ಲ. ನಂತರ ಅವಳು ಬೇರೊಬ್ಬನನ್ನು ಮದುವೆಯಾದಳು. ಅವಳ ಬಗ್ಗೆ ಪ್ರೇಮದ ಭಾವನೆಯನ್ನೇ ಬೆಳೆಸಿಕೊಂಡಿರದ ಗೊಬ್ಬು ಅದಕ್ಕೇನು ಕೊರಗಲಿಲ್ಲ, ಮರುಗಲಿಲ್ಲ. "ನನ್ನಂತ ಗೊಬ್ಬನನ್ನು ಪ್ರೀತಿಸುವ ಒಬ್ಬ ಹುಡುಗಿ ಜಗತ್ತಲ್ಲಿ ಇದಾಳಲ್ಲ" ಎಂದು ಒಮ್ಮೊಮ್ಮೆ ಅಚ್ಚರಿ, ಖುಷಿ ವ್ಯಕ್ತಪಡಿಸುತ್ತಿದ್ದ

"ವಿಕಾರ ಸ್ವರೂಪಿಯಾದ ಅಷ್ಟಾವಂಕ್ರನನ್ನು ಸೌಂದರ್ಯದ ಖನಿಯಾದ ರಾಣಿ ಅಮೃತಮತಿ ಪ್ರೀತಿಸಿದ ('ಜನ್ನ' 'ಯಶೋಧರ ಚರಿತ್ರೆ'ಯಲ್ಲಿ ಬರುವ ಪಾತ್ರಗಳು) ನೆಲವಿದು. ಯಾರಿಗೆ ಯಾರಮೇಲೂ ಪ್ರೀತಿ ಹುಟ್ಟಬಹುದು, Love is blind" ಅಂದೆ

"ಹೇ... ನಾನೇನು ಅಷ್ಟಾವಂಕ್ರನಷ್ಟು ವಿಕಾರವಾಗಿದೀನಾ..? ಅವಳೇನು ಅಮೃತಮತಿಯಷ್ಟು ಸೌಂದರ್ಯವತಿನಾ? ಎಂದು 'ಹಿಹ್ಹಿಹ್ಹಿ...' ನಗತೊಡಗಿದ

 

ಗೊಬ್ಬುವಿನ ವಿರಾಟ್ ಸ್ವರೂಪ ದರ್ಶನ

 

ಗೊಬ್ಬನಿಗೊಂದು ವಿಚಿತ್ರ ಅಭ್ಯಾಸವಿತ್ತು. ಅವನು ಪ್ರತಿದಿನ ಹುಟ್ಟುಡುಗೆಯಲ್ಲಿ ಸ್ನಾನ ಮಾಡುತ್ತಿದ್ದ! ಮಾಡಲಿ, ಆದರೆ ಬಾತ್ ರೂಮಿನ ಡೋರ್ ಲಾಕ್ ಹಾಕಿಕೊಳ್ಳುತ್ತಿರಲಿಲ್ಲ. ಲಾಕ್ ಹಾಕಿಕೊಳ್ಳುವುದಿರಲಿ, ಸರಿಯಾಗಿ ಡೋರ್ ಕೂಡಾ ಮುಚ್ಚಿಕೊಳ್ಳುತ್ತಿರಲಿಲ್ಲ. ನೆಪಕ್ಕೆ ಮಾತ್ರ ಡೋರ್ ನ್ನು ಸ್ವಲ್ಪ ಮರೆಮಾಡಿ ಏನೇನೋ ಕೂಗಾಡುತ್ತಾ, ಹಾಡು ಹೇಳಿಕೊಳ್ಳುತ್ತಾ ಸ್ನಾನ ಮಾಡುತ್ತಿದ್ದ. ಅವನ ಸ್ವಭಾವ ಗೊತ್ತಿದ್ದ ನಾನು ಮತ್ತು ರೂಂ ಮೇಟ್ ರಘು ಬಾತ್ ರೂಂ ಡೋರ್ ಮುಟ್ಟುವ ಸಾಹಸ ಮಾಡುತ್ತಿರಲಿಲ್ಲಒಮ್ಮೆ ರೂಂ ನಲ್ಲಿ ಗೊಬ್ಬು ಒಬ್ಬನೇ ಇದಾನೆ. ಮೇನ್ ಡೋರ್ ತೆರೆದಿಟ್ಟುಕೊಂಡು ಬಾತ್ ರೂಂ ಡೋರ್ ಸ್ವಲ್ಪ ಮರೆಮಾಡಿ ಉದ್ದೋಉದ್ದಕ್ಕೆ ನವಜಾತ ಶಿಶುವಿನಾವಸ್ಥೆಯಲ್ಲಿ  ನಿಂತು ಖುಷಿಯಲ್ಲಿ ಜಲಕ್ರೀಡೆಯಾಡಲಾರಂಭಿಸಿದ್ದಾನೆ. ಅವನ ಅತ್ಯದ್ಭುತ ಸ್ವಭಾವದ ಬಗ್ಗೆ ಗೊತ್ತಿಲ್ಲದ ರಘು ಗೆಳೆಯ ಶರಣ್ ಯಾವುದೋ ಕಾರಣಕ್ಕೆ ರೂಂ ಒಳಗೆ ಬಂದಿದ್ದಾನೆ. ರೂಂ ನಲ್ಲಿ ಯಾರೂ ಇಲ್ಲ. ಬಾತ್ ರೂಂ ಒಳಗೆ ನೀರಿನ ಸದ್ದು ಕೇಳಿಬರುತ್ತಿದೆ. ಬಾತ್ ರೂಂ ಡೋರ್ ಅರ್ಧ ಓಪನ್ ಇರುವುದರಿಂದ ಬಹುಶಃ ಯಾರೋ ಮುಖ ತೊಳೆಯುತ್ತಿರಬೇಕು, ಮಾತಾಡಿಸಿದರಾಯ್ತು ಎಂದುಕೊಂಡನೇನೋ.... ಜೋರಾಗಿ ಡೋರ್ ತಳ್ಳಿಬಿಟ್ಟಿದ್ದಾನೆ..! ಅಷ್ಟೇ..!! 

 

ಗೊಬ್ಬುವಿನ ವಿರಾಟ್ ಸ್ವರೂಪ ದರ್ಶನ!!! 

 

ಗೊಬ್ಬುವಿನ ವಿಕಾರ್ ಸ್ವರೂಪ ದರ್ಶನ!!!

 

ಶರಣ್ ಗೆ ದಿಗ್ಭ್ರಮೆ! ಅಸಹ್ಯ, ಭಯ, ಸಿಟ್ಟು, ಸಂಕೋಚ, ಜಿಗುಪ್ಸೆ, ಆಕ್ರೋಶ, ಆವೇಶ... ಎಲ್ಲಾ ಭಾವಗಳು ಒಮ್ಮೆಲೆ ಉಕ್ಕಿಬಂದಂತಾಗಿ ಚೀರಿಕೊಂಡು ರೂಂ ನಿಂದ ಹೊರಕ್ಕೋಡಿದ್ದಾನೆ. ಗೊಬ್ಬುಗೆ ಶರಣ್ ವರ್ತನೆ ವಿಚಿತ್ರವೆನಿಸಿ ನಿರಾತಂಕನಾಗಿ ಸ್ನಾನ ಮುಗಿಸಿ ಹೊರಬಂದಿದ್ದಾನೆ. ಆಮೇಲೆ ಶುರುವಾಯ್ತಲ್ಲ ಶರಣ್ ಆಕ್ರೋಶ. ಕೂಗಾಡುತ್ತಾ ಗೊಬ್ಬು ಜೊತೆ ಜಗಳ ತೆಗೆದಿದ್ದಾನೆ. "ನೀನು ಯಾಕೆ ಚೆಡ್ಡಿ ಧರಿಸಿರಲಿಲ್ಲ?" ಎಂಬುದು ಶರಣ್ ತಕರಾರು. "ನೀನ್ಯಾಕೆ ಡೋರ್ ತಳ್ಳಿದೆ?" ಎಂಬುದು ಗೊಬ್ಬುವಿನ ಪ್ರಶ್ನೆ. ತಪ್ಪು ಇಬ್ಬರದೂ ಇದ್ದರಿಂದ ಕೊನೆಗೂ ಜಗಳ ಬಗೆಹರಿಯಲಿಲ್ಲ. ಆಮೇಲೆ ತುಂಬಾ ದಿನಗಳವರೆಗೆ ಶರಣ್ ಅಸ್ವಸ್ಥಗೊಂಡವನಂತಿದ್ದ. ಗೊಬ್ಬುವನ್ನು ಮಾತಾಡಿಸುವುದನ್ನು ಬಿಟ್ಟ. ಇದರಾವುದರ ಬಗ್ಗೆ ತಲೆಕೆಡಿಸಿಕೊಳ್ಳದ ಗೊಬ್ಬು ಎಂದಿನಂತೆ ಸರ್ವವಸ್ತ್ರ ಪರಿತ್ಯಾಗಿ ಸಂತನಂತೆ ಜಲಕ್ರೀಡೆಯಾಡಲಾರಂಭಿಸಿದ್ದ

 

ಪಿಎಚ್.ಡಿ ಥೀಸಿಸ್ ಸಬ್ಮಿಟ್ ಮಾಡಿದ ನಂತರ ಗೊಬ್ಬು ಮದುವೆಯಾದ. ಅವನ ಮದುವೆಗೆ ಇಡೀ ಸಿಯುಕೆ ಬಳಗದೊಂದಿಗೆ ನಾನು ಹೋಗಿದ್ದೆ. ಆದರೆ ಶರಣ್ ಮಾತ್ರ ಬಂದಿರಲಿಲ್ಲ ಅಷ್ಟೇ

 

ಗೊಬ್ಬು ಈಗ ಬದುಕಿನಲ್ಲಿ ಸಂತೃಪ್ತ.

 

ಬೆಚ್ಚನೆಯ ಮನೆ

 

ವೆಚ್ಚಕ್ಕೆ ಹೊನ್ನು

 

ಇಚ್ಚೆಯನರಿಯುವ ಸತಿ 

 

ಎಲ್ಲವೂ ಇದೆ... ಸ್ವರ್ಗಕ್ಕೆ ಕಿಚ್ಚು ಹಚ್ಚುವುದೊಂದು ಬಾಕಿ ಇದೆ ಅಷ್ಟೇ.

 

ಅಳುವೇ ಕಾಣದ ಗೊಬ್ಬುವಿನ ಮುಖದಲ್ಲಿ ನಗು ಚಿರಸ್ಥಾಯಿಯಾಗಿ ಉಳಿಯಲಿ ಎಂಬುದೇ ನನ್ನ ಹಾರೈಕೆ....

  

                                                                                                                                  ನಿಮ್ಮವನು,

                                                                                                                                         - ರಾಜ್


3 ಕಾಮೆಂಟ್‌ಗಳು:

Venkatesh ಹೇಳಿದರು...

ಸೂಪರ್ ಸರ್....
ಅವರು ನನಗೂ ಕೂಡ ಪರಿಚಯ
ಒಳ್ಳೆಯ‌‌ ಮನುಷ್ಯ.

sugath ಹೇಳಿದರು...

ತುಂಬಾ ಚೆನ್ನಾಗಿದೆ ಬರಹ.
ನಾನು ಅವರೊಂದಿಗೆ ಇದ್ದೆನಾದರೂ ಇದೆಲ್ಲ ಅಪರಿಚಿತ. ಉತ್ತಮ ವ್ಯಕ್ತಿತ್ವಬರಹ.

Unknown ಹೇಳಿದರು...

ಸೂಪರ್